ಶೀರ್ಷಿಕೆ ನೋಡಿ ಬೆರಗಾಗಬೇಡಿ, ನಾನಿಲ್ಲಿ ಯಾವುದೇ ರವಿ ಅಥವಾ ಕವಿಯ ಬಗ್ಗೆ ಹೇಳ ಹೊರಟಿಲ್ಲ.
ಆದರೆ ಯತಿಯ ಬಗ್ಗೆ ಒಂದೆರಡು ಮಾತು ಹೇಳಲು ಬಯಸುವೆ.
"ಯತಿ" ಅಂದರೆ ಹಿಮಾಲಯದಲ್ಲಿ ವಾಸಿಸುವ ಯತಿಯಲ್ಲ, ನಮ್ಮ ಮನೆಯಿಂದ ನಾಲ್ಕು ಹೆಜ್ಜೆ ಮುಂದೆ ಇರುವ ಯತೀಶ ಎಂಬ ನನ್ನ ಗೆಳೆಯನ ಬಗ್ಗೆ, ಯತೀಶನನ್ನು ಯತಿಯನ್ನಾಗಿ ಮಾಡಿ ಅವನ ಹೆಸರಿಗೆ ಒಂದು ಗತಿ ಕಾಣಿಸಿದ ಕೀರ್ತಿ ನಮ್ಮದು .
ವಯಸ್ಸಿನಲ್ಲಿ ನನಗಿಂತ 15 ವರ್ಷ ಹಿರಿಯನಾದರೂ ನಾವಿಬ್ಬರು Navy ಯಲ್ಲಿ ಕೆಲಸ ಮಾಡಿದ್ದರಿಂದ ಒಂದು ಗೆಳೆತನ ಬೆಸೆಯಿತು.
ಈಗ ಹೆಚ್ಚು ಕಡಿಮೆ ತನ್ನ ನಿವೃತ್ತಿ ಜೀವನದ ಹಂತದಲ್ಲಿರುವ ಈತ, ಜೀವನವನ್ನು ಅನುಭವಿಸಿ, ಆನಂದಿಸುತ್ತಿರುವ ಉತ್ಸಾಹದ ಚಿಲುಮೆ.
ಈತನಿಗೆ ಮಾಲು, ಕ್ಲಬ್ಬು/ ಪಬ್ಬುಗಳು ಒಗ್ಗುವುದಿಲ್ಲ, ಆದರೆ ಪ್ರಕೃತಿ ಮಾತೆಯ ಸೊಬಗನ್ನು ಆಸ್ವಾದಿಸುತ್ತಾ ಆನಂದವನ್ನು ಅನುಭವಿಸುತ್ತಾನೆ. ನನ್ನ ಗಮನ ಸೆಳೆಯುವುದು ಈತ ಆಯ್ದುಕೊಳ್ಳುವ ಜಾಗ ಮತ್ತು ಆತನ ಕ್ಯಾಮೆರಾ ಸೆರೆ ಹಿಡಿಯುವ ವಿಸ್ಮಯ ನೋಟಗಳು, Facebook ನಲ್ಲಿ ಈತನ ಪೋಸ್ಟ್ಗಳನ್ನು ತಪ್ಪದೇ ವೀಕ್ಷಿಸುವಂತೆ ಮಾಡುತ್ತದೆ.
ಸೂರ್ಯೋದಯ ಸೂರ್ಯಾಸ್ತ ಇವೆಲ್ಲ ಮಾಮೂಲಿ ಚಿತ್ರಗಳು ನನ್ನ ಗಮನವನ್ನು ಸೆಳೆಯುವುದು ಈತ ವನ್ಯಜೀವಿಗಳನ್ನು ಸೆರೆ ಹಿಡಿಯುವ ಬಗೆ.
ಹೆಸರೇ ತಿಳಿಯದ ಬಣ್ಣ- ಬಣ್ಣದ ಹಕ್ಕಿಗಳು, ಹುಲಿ, ಸಿಂಹ ಚಿರತೆ, ಕರಡಿ ಇತ್ಯಾದಿ ಪ್ರಾಣಿ- ಪಕ್ಷಿಗಳನ್ನು ಈತ ಸೆರೆ ಹಿಡಿಯುವ ರೀತಿಗೆ ನಿಜಕ್ಕೂ ನಿಬ್ಬರಗಾಗಿದ್ದೇನೆ.
ಈತನಾದರೂ ಕೆನ್ಯ, ಅಮೆಜಾನ್ ಕಾಡು, ಅಥವಾ ಇನ್ನಾವುದೇ ವಿದೇಶ ಪ್ರದೇಶಗಳಿಗೆ ಹೋಗುವುದಿಲ್ಲ, ಬದಲಿಗೆ ನಮ್ಮದೇ ಸುವರ್ಣ ಕರ್ನಾಟಕದಲ್ಲಿರುವ ಬಂಡೀಪುರ, ನಾಗರಹೊಳೆ, ಕಬಿನಿ, ಬಿಸ್ಲೆ, ಮಾಸಿನಗುಡಿ, ದಾಂಡೇಲಿ, ಕೆಲವೊಮ್ಮೆ ಬೆಂಗಳೂರಿನ ಸುತ್ತ ಮತ್ತು ಪ್ರದೇಶಗಳಿಗೆ ಹೋಗಿ ಬರುತ್ತಾನೆ.
"ಈ ಜಾಗಗಳಿಗೆ ಹೋದರೆ ಸಾಕು ಎಲ್ಲಾ ರೀತಿಯ ಪ್ರಾಣಿ-ಪಕ್ಷಿಗಳು ನಮ್ಮ ಮುಂದೆ ಬಂದು ಕ್ಯಾಮರಾಕ್ಕೆ ಪೋಸು ಕೊಡುತ್ತವೆ" ಎಂದು ನಂಬುವಂತೆ ಮಾಡಿದ್ದು ಈತನ ಛಾಯಾಚಿತ್ರಗಳು.
ಅದೇ ನಂಬಿಕೆಯಿಂದ ಬಂಡೀಪುರಕ್ಕೆ ಹೋದ ನನಗೆ ನಿರಾಶೆ ಕಾದಿತ್ತು. ಬೊಗಳುವ ಜಿಂಕೆ, ಜೇನು ಹುಳುಗಳನ್ನು ತಿನ್ನುವ "ಬೀ ಈಟರ್" ಹಾಗೂ ಒಂದೆರಡು ಬಗೆಯ ಪಕ್ಷಿಗಳು ಕಂಡರೂ, ಯತಿ ಸೆರೆ ಹಿಡಿದಂತೆ ಯಾವ ನೋಟವು ಕಾಣಲಿಲ್ಲ.
ಎಲ್ಲೋ ದೂರದಲ್ಲಿ ಸಾಗಿ ಹೋಗುತ್ತಿರುವ ಆನೆಯ ಹಿಂಡು, ಕಾಡೆಮ್ಮೆಗಳು, ಎತ್ತರದ ಮರದ ಮೇಲೆ ಕೆಲವೇ ಜನರ ಕಣ್ಣಿಗೆ ಬಿದ್ದ ಹಕ್ಕಿಗಳು "ಹ್ಹಾ ಕಾಣ್ತು...ಕಾಣ್ತು" ಎಂದು ಅವರು ಕೂಗಿ ಆನಂದ ಪಟ್ಟ ಪ್ರಸಂಗಗಳು ಅದೆಷ್ಟೋ.
ಯತಿಯ ಕ್ಯಾಮೆರಾ ಮುಂದೆ ಮಲಗಿ ಮೈ ಮುರಿಯುವ, ನೀರು ಕುಡಿಯುವ, ಆಕಳಿಸುವ ಹುಲಿ ಚಿರತೆ ಸಿಂಹ ಇತ್ಯಾದಿ ಪ್ರಾಣಿಗಳು, ನಾವು ಹೋದಾಗ ಮಾತ್ರ ರಜೆಯಲ್ಲಿದ್ದಂತೆ ಭಾಸವಾಯಿತು.
ಸಫಾರಿಯವನು ಒಂದು ಬಳಿ ಗಾಡಿ ನಿಲ್ಲಿಸಿ "ಶ್ಶ್....ಶ್ಶ್..."ಎಂದು ಸನ್ನೆ ಮಾಡಿದ. ಹುಲಿ ಚಿರತೆಯ ನಿರೀಕ್ಷೆಯಲ್ಲಿದ್ದ ನಮ್ಮೆಲ್ಲರಿಗೂ ಒಮ್ಮೆಲೇ ಉತ್ಸಾಹ ಉಕ್ಕಿ ಬಂದಿತು. ನಾವು ಕೂಡ ಒಬ್ಬರಿಗೊಬ್ಬರು "ಶ್ಶ್....ಶ್ಶ್..." ಎಂದುಕೊಳ್ಳುತ್ತಾ ಆತ ಬೆರಳು ತೋರಿದ ಕಡೆ ನೋಡಿದೆವು.
ಹುಲ್ಲಿನ ಮೇಲೆ ಮಾಡಿದ ಹೇಸಿಗೆಯನ್ನು ತೋರಿಸುತ್ತಾ " ಹುಲೀದು ಸಾರ್, ಇಲ್ಲೇ ಎಲ್ಲೋ ಹತ್ತಿರದಲ್ಲೇ ಇದೆ ಗಲಾಟೆ ಮಾಡಬೇಡಿ" ಎಂದ. ಹೆಚ್ಚು ಕಡಿಮೆ ನಮ್ಮ ಬೀದಿ ನಾಯಿಗಳು ಮಾಡುವ ಹೇಸಿಗೆಯಂತಿದ್ದ ಅದನ್ನೇ ಕೆಲವು "ಯಾಷಿಕಾ, ನೈ ಕಾನ್ ಡಿ-90" ಕ್ಯಾಮೆರಾಗಳು ಸೆರೆ ಹಿಡಿದುಕೊಂಡವು.
ನನ್ನ ಬಳಿ ನೋಕಿಯಾ 3310 ಬಿಟ್ಟು ಬೇರೆ ಏನೂ ಇಲ್ಲದ ಕಾರಣ ನಾನು ಸುಮ್ಮನೆ ಬೆಪ್ಪನಂತೆ ಅತ್ತ- ಇತ್ತ ಕಣ್ಣು ಆಡಿಸುತ್ತಾ ಹುಲಿ ಚಿರತೆಗಳ ನಿರೀಕ್ಷೆಯಲ್ಲಿ ನಿಂತೆ.
"ಯಾಶಿಕ, D-90 ಗಳಿದ್ದರೂ ಒಂದೂ ಪ್ರಾಣಿ ಕಾಣಲಿಲ್ಲ ನಾವು ಹೋದಾಗ" ಎಂದು ನನ್ನ ಅಳಲು ಅವನ ಮುಂದೆ ತೋಡಿಕೊಂಡಾಗ, " ಎಲ್ಲಾವುದಕ್ಕೂ ತಾಳ್ಮೆ ಬೇಕು ವಿಕ್ಕಿ, ನನಗೂ ಕೆಲವೊಮ್ಮೆ ಕಾಡೆಮ್ಮೆ ಬಿಟ್ಟು ಬೇರೆ ಯಾವ ಪ್ರಾಣಿಯೂ ಕಾಣಿಸುವುದಿಲ್ಲ ಎಲ್ಲಾವುದಕ್ಕೂ ಅದೃಷ್ಟ ಮತ್ತು ಸಮಯ ಕೂಡಿ ಬರಬೇಕು" ಎಂದ.
ಕೋವಿಡ್ ಮಹಾಮಾರಿ ಬಂದ ಕಾಲದಲ್ಲಿ ಮನೆ ಬಿಟ್ಟು ಮನೆ ಆಚೆ ಹೋಗದೆ ಮನೆಯಲ್ಲಿ ಬಂಧಿತರಾಗುವ ಕಾಲ ಬಂದಾಗ ಈತನ ಫೋಟೋಗಳು ಒಂದೆರಡು ತಿಂಗಳುಗಳು ನಿಂತು ಹೋದವು
"ಕೋವಡ್ ಮುಗಿಯುವವರೆಗೂ ಈತನ ಫೇಸ್ ಬುಕ್ Update ಆಗುವುದಿಲ್ಲ" ಎಂದು ತಿಳಿದಿದ್ದ ನನಗೆ ಆಶ್ಚರ್ಯ ಕಾದಿತ್ತು, ಕಾಡಿನ ಪ್ರದೇಶಗಳಲ್ಲಿ ಮಾತ್ರ ಕಾಣಿಸುವ ಹೆಸರು ತಿಳಿಯದ ಹಕ್ಕಿಯೊಂದು ಈತನ ಮನೆಯ ಮಹಡಿ ಮೇಲೆ ಕೂತಿದ್ದನ್ನು ಸೆರೆ ಹಿಡಿದು " ಕರೆಯದೆ ಬಂದ ಅತಿಥಿ" ಎಂಬ ಶೀರ್ಷಿಕೆಯೊಂದಿಗೆ ಫೋಟೋ ಹಂಚಿಕೊಂಡ
(ಆಗ ಬೆಂಗಳೂರಿನಲ್ಲಿ ಜಯನಗರ ಹಾಗೂ ಸುತ್ತಮುತ್ತ ಬಡಾವಣೆಗಳಲ್ಲಿ ನವಿಲುಗಳು ಕಂಡು ಬಂದಿದ್ದವು)
" ಅರೆರೆ ನಮ್ಮ ಮನೆಯ ಮಹಡಿಯ ಮೇಲೆ ಸಿಗುತ್ತದೆ ಬಂಡಿಪುರದ ವೈಭವ" ಎಂಬ ಉತ್ಸಾಹ ದೊಂದಿಗೆ ಮಹಡಿ ಮೇಲೆ ಹೋದವನಿಗೆ ಕಂಡದ್ದು
ಮೂರು ಕಾಗೆ,
5 ಪಾರಿವಾಳ, ಹಾಗೂ
ಒಂದು ಹದ್ದು.
" ಎಲ್ಲಾವುದಕ್ಕೂ ಅದೃಷ್ಟ ಹಾಗೂ ಸಮಯ ಕೂಡಿ ಬರಬೇಕು ವಿಕ್ಕಿ" ಎಂಬ ಯತಿಯ ಮಾತುಗಳು ನೆನಪಾದವು
ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಕುವೆಂಪು ಅವರು ಒಂದು ಪದ್ಯದಲ್ಲಿ ಮಲೆನಾಡಿನ ಸೌಂದರ್ಯವನ್ನು ವರ್ಣಿಸುವಾಗ, ರವಿಯ ಕಿರಣಗಳು ಭೂಮಿಗೆ ತಾಗದಂತೆ ಬೆಳೆದ ಕಾಡಿನ ಮರದ ಅಡಿಯಲ್ಲಿ ಕಂಡ ಸೌಂದರ್ಯವನ್ನು ವರ್ಣಿಸುತ್ತಾ " ರವಿ ಕಾಣದ್ದನ್ನು ಕವಿ ಕಂಡ" ಎಂದು ಒಂದೇ ಸಾಲಿನಲ್ಲಿ ವರ್ಣಿಸಿದ್ದು ನೆನಪಾಯಿತು.
ಇಲ್ಲಿ ರವಿ, ಕವಿ ಇಬ್ಬರೂ ಕಾಣದನ್ನು ನಮ್ಮ "ಯತಿ" ಕಂಡ
ಅವನ ಕೆಲವು ಛಾಯಾ ಚಿತ್ರಗಳು ನಿಮ್ಮ ವೀಕ್ಷಣೆಗಾಗಿ ಹಂಚಿಕೊಂಡಿದ್ದೇನೆ