Wednesday 30 December 2009

ಸುಲಭದ ದಾರಿ ಯಾವುದಯ್ಯಾ???


ಪಾರ್ಕಿನಲ್ಲಿ ಆಗ ತಾನೆ walking ಮುಗಿಸಿ ಬೆಂಚಿನ ಮೇಲೆ ಕೂತಿದ್ದವನಿಗೆ ತುಸು ದೂರದಲ್ಲೇ ಕುಳಿತು ಮಾತನಾಡುತಿದ್ದ ಮುದುಕರ ಸಮೂಹದ ಕಡೆಗೆ ಗಮನ ಹರಿಯಿತು.
ಅವರ ಮಾತು ತುಸು ಜೋರಾಗೆ ಇದ್ದಿದ್ದರಿಂದ ಅವರ ಸಂಭಾಷಣೆ ಕೇಳಲು ಅಷ್ಟೇನು ಕಷ್ಟವಾಗಲಿಲ್ಲ. ಸಹಜವಾಗಿ ಇನ್ಯಾರದೋ ವಿಷಯವನ್ನು ಮಾತನಾಡುತಿದ್ದರು. ನಾಲ್ಕಾರು ಜನ ಸೇರಿದಾಗ ಅದಕ್ಕಿಂತ ಖುಷಿ ಕೊಡುವ ಮತ್ತು ಹೊತ್ತು ಕಳೆಯುವ ಪರಿ ಮತ್ತೊಂದಿಲ್ಲ.
"ರಾಮರಾಯರ ಮಗ ಹೊಸ ಕಾರು ತಗೊಂಡ್ನಂತೆ, ಹತ್ತು ಲಕ್ಷ ಅಂತೆ".
"ಹೌದಾ?!! ಈಗಿನವರಿಗೆ ಏನ್ರೀ? ಐಟಿ, ಬೀಟಿ, ಅಂತ ಲೆಕ್ಕ ಇಲ್ದಂಗೆ ದುಡ್ಡನ್ನು ಬಹಳ ಸುಲಭವಾಗಿ ಮತ್ತು ಬೇಗ ಸಂಪಾದಿಸುತ್ತಾರೆ, ಈಗಿನವರದೇ ಆರಾಮ್ ಜೀವನ ಕಣ್ರೀ"
ನನ್ನ ಪಂಚೇಂದ್ರಿಯಗಳು ಒಮ್ಮೆಗೆ ಚುರುಕಾದವು, ಇನ್ಯಾರದೋ ವಿಷಯ ಕೇಳಲು ನಂಗೆ ಯಾವುದೇ ರೀತಿಯಾದ ಆಸಕ್ತಿ ಇರಲಿಲ್ಲ, ಆದರೆ ಅವರು ಪ್ರಸ್ತಾಪಿಸಿದ "ಈಗಿನವರು" , "ಸುಲಭವಾಗಿ ದುಡ್ಡು.." ಈ ಎರಡು ಪದಗಳು ತಲೆ ಕೊರೆಯಲು ಶುರು ಇಟ್ಟವು.
"ಈಗಿನವರಿಗೆ ದುಡ್ಡಿನ ಬೆಲೆಯ ಅರಿವಿಲ್ಲ" ಎನ್ನುವ ಹಿರಿಯರ ಆಕ್ಷೇಪಣೆಯನ್ನು ತಕ್ಕ ಮಟ್ಟಿಗೆ ಒಪ್ಪಬಹುದಾದರೂ "ಈಗಿನವರು ಸುಲಭವಾಗಿ ದುಡ್ಡು ಮಾಡ್ತಾರೆ" ಎನ್ನುವ ಮಾತನ್ನು ಒಪ್ಪುವುದಾದರು ಹೇಗೆ?
ನಿಜವಾಗಲೂ ಸುಲಭವಾಗಿ ದುಡ್ದು ಮಾಡುವ ದಾರಿ ಎಲ್ಲಾದರು ಇದಯೇ? ಎಂಬ ದಿಕ್ಕಿನಲ್ಲಿ ಯೋಚನಾಲಹರಿ ಹರಿಯುವಂತಾಯಿತು.
ಇಂದು ಜಾಗತೀಕರಣದ ಸಲುವಾಗಿ ದೊರೆಯುತ್ತಿರುವ ಹಲವಾರು ಉದ್ಯೋಗಾವಕಾಶಗಳಿಂದ ಎಲ್ಲರೂ ದುಡ್ಡು ಮಾಡುವಂತಾಗಿದೆ. ಹಣದಬ್ಬರ ತುಸು ಹೆಚ್ಚಾಗಿದೆ ಎನ್ನುವುದೂ ಸುಳ್ಳಲ್ಲ, ಅದರ ಜೊತೆಯಲ್ಲೆ ಒದಗಿ ಬರುವ ಐಶಾರಾಮವೂ ಜೀವನ ಶೈಲಿಯನ್ನು ಬದಲಿಸಿದೆ ಎನ್ನುವುದೂ ಸುಳ್ಳಲ್ಲ.
ಆದರೆ "ಸುಲಭವಾಗಿ ದುಡ್ದು......." ಇದನ್ನು ಮಾತ್ರ ಮನಸ್ಸು ಒಪ್ಪುವುದಿಲ್ಲ.
ಒಬ್ಬ Software Engineer ಕಾರಿನಲ್ಲಿ ಓಡಾಡುವುದು,ಅವನ ಲಕ್ಷಗಟ್ಟಲೆ ಸಂಭಳವೂ/ಬಂಗಲೆ ಎಲ್ಲವೂ ನಮ್ಮ ಕಣ್ಣಿಗೆ ಕಾಣುವುದು, ಆದರೆ ತನ್ನ ಐಶಾರಾಮದ ಆಫೀಸಿನಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿದ್ದುಕೊಂಡೆ ಬೆವರುವಂತ ಒತ್ತಡದಲ್ಲಿ ಆತ ಕೆಲಸ ಮಾಡುವುದು ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ.
ಒಬ್ಬ ಸಿನೆಮಾ ನಟ ಒಂದು ಸಿನೆಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ ಒಂದು ಕೋಟಿಯಿರಬಹುದು, ಆದರೆ ಆ ಮಟ್ಟಕ್ಕೆ ಏರಲು ಆತ ಪಟ್ಟಿರುವ ಪರಿಶ್ರಮವಿರುತ್ತದೆ ಮತ್ತು ಆ ಸ್ಥಾನ ಉಳಿಸಿಕೊಳ್ಳಲು ಆತ ಸದಾ ಶ್ರಮಿಸುತಿರುತ್ತಾನೆ.
ಒಬ್ಬ ಸೋನು ನಿಗಮ್ ಒಂದು ಹಾಡಿಗೆ ಲಕ್ಷಗಟ್ಟಲೆ ಸಂಭಾವನೆ ಪಡೆಯಬಹುದು, ಆದರೆ ಹಾಗೆ ಹಾಡಲು ಅವನು ಎಷ್ಟು ವರ್ಷ ಶ್ರಮ ಪಟ್ಟನೆಂದು ಅವನಿಗೇ ಗೊತ್ತು. ( ಇಲ್ದೇ ಇದ್ರೆ ಇಂದು ನಾವೆಲ್ಲರೂ ಸೋನು ನಿಗಮ್ ಆಗಬಹುದಿತ್ತು ಅಲ್ವೇನ್ರಿ??).
ಒಬ್ಬ ವ್ಯಾಪರಸ್ಥ, ಒಬ್ಬ ಉದ್ಯಮಿ, ಒಬ್ಬ ಉದ್ಯೋಗಪತಿ, ಒಬ್ಬ Builder, ಕೊನೆಗೆ ರಸ್ತೆಯ ಮೂಲೆಯಲ್ಲಿ ನಿಂತು ಬರುವ ವಾಹನಗಳತ್ತ ಕೈಯೊಡ್ಡಿ ನೂರಾರು ಕಾರಣ ಕೊಟ್ಟು, ಸಾವಿರಾರು ರೂಪಾಯಿ ದಂಡ ಶುಲ್ಕ ತಪ್ಪಿಸುವ ನೆಪದಲ್ಲಿ ನೂರಿನ್ನೂರು ತನ್ನ ಜೇಬಿಗೆ ಇಳಿಸುವ Traffic Police, ಇವರೆಲ್ಲರೂ ತಮ್ಮ ಎಣಿಕೆಗೆ ಮೀರಿ ದುಡಿಯುತ್ತಾರೆ, ಯಾರಿಗೂ ತಮ್ಮ ಕೆಲಸ ಸುಲಭವಾದದ್ದು ಅಂತ ಅನ್ನಿಸುವುದೇ ಇಲ್ಲ.

ವ್ಯಾಪರಸ್ತನಿಗೆ ಉದ್ಯಮಿಯ ಕೆಲಸ ಆರಾಮ ಎನಿಸಬಹುದು, ಸದಾ ಪೈಪೋಟಿ ಎದುರಿಸುವ ಒಬ್ಬ Builderನ ಕಣ್ಣಿಗೆ ಇನ್ಯಾರದೋ ವೃತ್ತಿಯು ಆರಾಮವಾಗಿ ಕಾಣುತ್ತದೆ. ಬಿಸಿಲಿನಲ್ಲಿ ದಿನವಿಡೀ ನಿಂತು, ಸದಾ ಬರ್ರ್ ಗುಡುವ ವಾಹನಗಳ ಸದ್ದನ್ನು ಆಲಿಸುತ್ತಾ, ಅವುಗಳು ಬಿಡುವ ಹೊಗೆಯನ್ನು ನುಂಗುತ್ತಾ ತಪ್ಪಿತಸ್ಥರಿಗಾಗಿ ಹದ್ದಿನ ಕಣ್ಣಿನಿಂದ ಕಾಯುವ Traffic Policeಗೆ ತನ್ನ ಕೆಲಸ ಬಿಟ್ಟು ಇನ್ಯಾವುದೇ ಕೆಲಸ ಆರಾಮವಾದದ್ದು ಅಂತ ಅನಿಸಿದರೆ ಅದು ಅವನ ತಪ್ಪಲ್ಲ.
ವೃತ್ತಿ ಯಾವುದೇ ಆಗಲಿ ಅದರಲ್ಲಿ ಅದರದೇ ಆದ "ಕಷ್ಟ" "ಸುಖ"ದ ನಂಟು ಇರುತ್ತದೆ, ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಯಶಸ್ಸಿನ ಗುಟ್ಟು ಅವರ ಶಿಸ್ತು, ಪರಿಶ್ರಮವಾಗಿರುತ್ತದೆ. ಅದೃಷ್ಟವೆಂಬುದು ಇದರಲ್ಲಿ ಒಂದು ಸಣ್ಣ ಅಂಶ ಮಾತ್ರ.
ಆದರೆ ಇದ್ಯಾವುದನ್ನು ಗಮನಿಸದೆ "ಅವರದ್ದು ಆರಾಮ ಕೆಲ್ಸ, ಸುಲಭವಾಗಿ ದುಡ್ಡು ಮಾಡುತ್ತಾರೆ" ಎನ್ನುವ ತತ್ವ ತಪ್ಪು.
ಸಂಜೆ ಆಯ್ತೆನ್ನುವಂತೆ ಸೂಚನೆ ಇಡುವ ಸಲುವಾಗಿ ಸೊಳ್ಳೆಯ ಕಡಿತದ ಮೂಲಕ ಯೋಚನಾಲಹರಿಯಿಂದ ವಾಸ್ತವಕ್ಕೆ ಬಂದೆ. ಮುದುಕರ ಸಮೂಹದ ಕಡೆಗೆ ಒಮ್ಮೆ ದೃಷ್ಟಿ ಹರಿಸಿದೆ, ಅವರ ಕಾರಿನ ಸಂವಾದ ನಡೆಯುತ್ತಲೇ ಇತ್ತು. "ದುಡಿಯಲು ಸುಲಭದ ದಾರಿ ಯಾವುದು??" ಎಂದು ಕೇಳಲು ಮುಂದಾದೆ.

ಉತ್ತರ ಅವರು ಕೊಟ್ಟರೊ ಬಿಟ್ಟರೊ, ನೀವು ಕೊಡ್ತೀರಾ????


Monday 12 October 2009

ಒಂದು ಹಿಟ್ ಸಿನೆಮಾ ಬೇಕು.......ಸಾರ್....

ಈ ವರ್ಷ ಇನ್ನೇನು ಮುಗೀತಾ ಬಂತು, ಆದರೆ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ವರ್ಷ ಶುರು ಆಗಲೇ ಇಲ್ಲ. ಹೊಸ ವರ್ಷದ ಹೊಸ ಕನಸು, ಹೊಸ ಸಿನೆಮಾ, ಹೊಸ ಹಾಡು, ಹೊಸ ಹಿಟ್ .....ಊಹುಂ...ಇದ್ಯಾವುದು ಅವರ ಪಾಲಿಗೆ ದಕ್ಕಲಿಲ್ಲ. ದಕ್ಷಿಣ ಭಾರತದಲ್ಲಿ ಅತ್ಯಂತ ಕಡೆಯ ಸ್ಥಾನದಲ್ಲಿ ಕನ್ನಡ ಚಿತ್ರೋದ್ಯಮ ಬೇರು ಬಿಟ್ಟಿದೆ.
ಒಂದು ಕಾಲದಲ್ಲಿ ತಮ್ಮ ವಿಭಿನ್ನ ಶೈಲಿಗೆ ಹೆಸುರುವಾಸಿಯಾಗಿದ್ದ ಪುಟ್ಟಣ ಕಣಗಾಲ್, ಬಿ. ಆರ್. ಪಂತಲು, ಮುಂತಾದವರು ತಯಾರಿಸುತಿದ್ದ ಚಿತ್ರ‍ಗಳು ಬೇರೆ ಭಾಷೆಗಳಲ್ಲಿ ತಯಾರಾಗುತ್ತಿದ್ದವು. ಅಂತ ಒಂದು ಹೊಸತನವಿರುತ್ತಿತ್ತು ಅವ್ರ ಚಿತ್ರಗಳಲ್ಲಿ.
ಬಹುತೇಕ ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳಾಗಿರುತ್ತಿದ್ದವು, ಕಥೆಗೆ ಪ್ರಾಮುಖ್ಯತೆ ಇರುತ್ತಿತ್ತು. ಪಾತ್ರಗಳಲ್ಲಿ ವಿಭಿನ್ನತೆ ಇರುತ್ತಿತ್ತು. ಆದರೆ ಇಂದಿನ ಚಿತ್ರಗಳಲ್ಲಿ ನೈಜತನವಿಲ್ಲ, ಬಹುತೇಕ ಎಲ್ಲವೂ ಅನ್ಯ ಭಾಷೆಗಳಿಂದ ನಕಲು ಮಾಡಿದ ಸಿನೆಮಾಗಳೆ.
ಹಾಗಂತ ನಮ್ಮಲ್ಲಿ ಒಳ್ಳೆ ಕಲೆಗಾರರಿಗೆ ಭರ ಇದೆ ಅಂತ ಅಲ್ಲ, "ಶ್" ಎಂಬ ವಿಶಿಷ್ಟವಾದ ಸಿನೆಮಾ ತೋರಿಸಿದ ಉಪೇಂದ್ರ, "ತರ್ಕ" , "ಉತ್ಕರ್ಷ" ಎಂಬ Suspense thriller ಚಿತ್ರಗಳನ್ನು ಕೊಟ್ಟ ಸುನಿಲ್ ಕುಮಾರ್ ದೇಸಾಯಿ, ಇತ್ತೀಚೆಗೆ ಹೊಸ ಅಲೆ ಎಬ್ಬಿಸಿರುವ "ಮುಂಗಾರು ಮಳೆ" ಯೋಗರಾಜ್ ಭಟ್, "ದುನಿಯಾ" ಸೂರಿ, "ಸೈನೈಡ್" (ಇದು ಈಗ ಹಿಂದಿಯಲ್ಲು ತಯಾರಾಗುತ್ತಿದೆ) ಖ್ಯಾತಿಯ ಎ.ಎಮ್. ಅರ್. ರಮೇಶ್ ಹೀಗೆ ಹೇಳುತ್ತ ಹೋದರೆ ಒಂದು ದೊಡ್ಡ ಪಟ್ಟಿಯೇ ತುಂಬುವುದು.
ಇಷ್ಟೆಲ್ಲಾ ಮೈಲಿಗಲ್ಲು ಸಾಧಿಸಿರುವ ನಮ್ಮ ಕನ್ನಡ ಚಿತ್ರ‍ರಂಗಕ್ಕೆ ಇಂದು ಭಾಧಿನುತ್ತಿರುವುದಾದರೂ ಎನು? ಕಲೆ,ಕಥೆ, ಇವುಗಳ ಕೊರತೆಯೇ? ಹಣದ ಕೊರತೆಯೇ? ಉತ್ತರ ಹೇಳುವುದು ಸ್ವಲ್ಪ ಕಷ್ಟವೆ. ಯಾಕೇಂದ್ರೆ ಇದ್ಯಾವುದಕ್ಕು ಕೊರತೆ ಇಲ್ಲವೇ ಇಲ್ಲ.
ಆದರೂ "ಸೋಲು" ಎಂಬ ಎರಡಕ್ಷರದ ಪದ ನಮ್ಮ ಚಿತ್ರೋದ್ಯಮವನ್ನು ಕಂಗಾಲಾಗುವಂತೆ ಮಾಡಿದೆ. ಸೋಲಿನ ಭೀತಿ ಎಷ್ಟ್ರಮಟ್ಟಿಗೆ ಇದೆ ಅಂದ್ರೆ ಎಲ್ಲರೂ ಗೆಲುವಿನ ಕುದುರೆಯ ಹಿಡಿಯುವ ಸಲುವಾಗಿ "ರಿಮೇಕ್" ಎಂಬ ಕಪ್ಪೆಚಿಪ್ಪಿನ ಗೂಡಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಈ ವರ್ಷ ಇದುವರೆಗೂ ತೆರೆಕಂಡ ಯಾವುದೇ ಚಿತ್ರವು ವಾಣಿಜ್ಯ ದೃಷ್ಟಿಯಿಂದ ಗೆದಿಲ್ಲ ಎನ್ನುವುದು ಬಹಳ ಸೂಕ್ಶ್ಮವಾಗಿ ಗಮನಿಸಬೇಕಾದ ವಿಷಯ. "ಎದ್ದೇಳು ಮಂಜುನಾಥ" ಜನರ ಮೆಚ್ಚುಗೆ ಗಳಿಸಿದ್ದರೂ ವಾಣಿಜ್ಯ ದೃಷ್ಟಿಯಿಂದ ಅದು ಹಿಟ್ ಅನ್ನಿಸಿಕೊಳ್ಳಲಿಲ್ಲ. ಹೇಮಂತ್ ಹೆಗ್ಡೆ ಅವರ "ಹೌಸ್ಫ಼ುಲ್" ಚಿತ್ರ‍ದ ಯಾವುದೇ ಪ್ರದರ್ಶನವು ಹೌಸ್ಫ಼ುಲ್ ಆಗಲಿಲ್ಲ ಅನ್ನುವುದು ವಿಪರ್ಯಾಸ.
ಮೊದಲೇ ತತ್ತರಿಸಿಹೋಗಿರುವ ಚಿತ್ರೋದ್ಯಮಕ್ಕೆ ಇದು ಆರದ ಗಾಯವಾಗಿದೆ.
ಕನ್ನಡ ಚಿತ್ರರಂಗ ಮೊದಲಿಂದಲೂ ತುಂಬ Safe Game ಆಡಿಕೊಂಡೇ ಬಂದಿದೆ, ಹಾಗಾಗಿ ಹೆಚ್ಚುವರಿ ಎಲ್ಲಾ ನಿರ್ಮಾಪಕರೂ "ರೀಮೇಕ್" ಹಾದಿ ಹಿಡಿದಿದ್ದರು, ಅದು ಕೆಲಕಾಲಕ್ಕೆ ಲಾಭದಾಯಕವೂ ಆಗಿತ್ತು, ಇತಿಹಾಸ ಕೆದುಕಿದಾಗ ಸಿಗುವ ಕೆಲವು ಉದಾಹರಣೆಗಳೆಂದರೆ "ರಣಧೀರ" "ರಾಮಾಚಾರಿ" ಹೆಚ್ಚುಕಡಿಮೆ ರವಿಚಂದ್ರನ್ ರ ಎಲ್ಲಾ ಚಿತ್ರಗಳು, "ಆಪ್ತಮಿತ್ರ" ಸೇರಿದಂತೆ ದ್ವಾರಕೀಶ್ ರ ಎಲ್ಲಾ ಚಿತ್ರಗಳು, ಸುಧೀಪ್ ರನ್ನು ಸ್ಟಾರ್ ಆಗಿ ಪರಿವರ್ತನೆ ಮಾಡಿದ "ಹುಚ್ಚ" ಅವರೇ ನಿರ್ದೇಶನ ಮಾಡಿದ "ಮೈ ಆಟೋಗ್ರಾಫ್" ಹೀಗೆ ಎಲ್ಲವೂ ರೀಮೇಕ್ ಚಿತ್ರಗಳೆ.
ಸುಲಭವಾಗಿ ಅನ್ಯ ಭಾಷೆ ಚಿತ್ರ ಒಂದನ್ನು ಕನ್ನಡೀಕರಿಸಿ ಹಾಕಿದ ಬಂಡವಾಳ ದಕ್ಕಬೇಕಾದರೆ ಸ್ವ-ಮೇಕ್ ಮಾಡುವ ಸಾಹಸವೇಕೆ ಎಂಬಂತ ಒಂದು ವಾತಾವರಣ ಸೃಷ್ಟಿಯಾಯಿತು, ಮುಂದೆ ಸಾಲಾಗಿ ಬಂದಿದ್ದು ಕನ್ನಡೀಕರಿಸಿದ ಚಿತ್ರಗಳೇ. ("ರೀ-ಮೇಕ್" ಎಂಬ ಪದದ ಬಳಕೆ ಕೆಲವರಿಗೆ ಆಗಿ ಬರುವುದಿಲ್ಲ).
ಭೂಗತ ಲೋಕದ ಕಥೆ ಆಧಾರಿತವಾದ "ಓಂ" , "ಜೋಗಿ" "ದುನಿಯಾ" ಒಂದು ಇತಿಹಾಸವನ್ನೇ ಸೃಷ್ಟಿ ಮಾಡಿದ ಚಿತ್ರಗಳು, ಪರಿಣಾಮ ಮುಂದೆ ಬಂದ (ಈಗಲೂ ಬರುತ್ತಿರುವ) ಎಷ್ಟೋ ಚಿತ್ರಗಳ ಮೂಲ ಕಥಾವಸ್ತು ಇದೇ ಆಯಿತು. "ಮಚ್ಚು" "ಲಾಂಗು" ನಾಯಕನ ಖಡ್ಡಾಯ ಆಯುಧಗಳಾದವು.
"ಕನ್ನಡದವರೇ ಕನ್ನಡ ಸಿನೆಮಾ ನೋಡಲ್ಲ..." ಅನ್ನುವುದು ನಿರ್ಮಾಪಕರ ಅಭಿಪ್ರಾಯ. "ಒಳ್ಳೇ ಸಿನೆಮಾ ಮಾಡುದ್ರೆ ಜನ ನೋಡ್ತಾರೆ" ಅಂತ "ಮುಂಗಾರು ಮಳೆ" "ಗಾಳಿಪಟ" ನಿರ್ದೇಶಕ ಯೋಗರಾಜ್ ಭಟ್ ಹೇಳಿಕೆ ನೀಡಿದ್ದರು, ಆದರೆ ಇತ್ತೀಚೆಗಷ್ತೆ ಬಿಡುಗಡೆಯಾದ ಅವರ "ಮನಸಾರೆ" ಚಿತ್ರವನ್ನೂ ಜನರು ಮನಸಾರೆ ತಿರಸ್ಕರಿಸಿದಾರೆ.
"ಎದ್ದೇಳು ಮಂಜುನಾಥ" ಚಿತ್ರದಲ್ಲಿ ಒಂದು ಮಾತಿದೆ "ಸ್ವಂತ ಬುದ್ಧಿ ಇರೋರು ರೀ-ಮೇಕ್ ಚಿತ್ರ ಮಾಡಬಾರ್ದು, ಸ್ವಂತ ಬುದ್ಧಿ ಇಲ್ದೇ ಇರೋರು ಸ್ವ-ಮೇಕ್ ಚಿತ್ರ ಮಾಡಬಾರ‍್ದು" ಅಂತ.
ಹಾಗಾದ್ರೆ ಚಿತ್ರೋದ್ಯಮದಲ್ಲಿ ಇರೋರು ಯಾರು? ಸ್ವಂತ ಬುದ್ದಿ ಇರೋರ ಅಥವ ಸ್ವಂತ ಬುದ್ಧಿ ಇಲ್ದೇ ಇರೋರ? ಅದರ ಬಗ್ಗೆ ಚರ್ಚೆ ಬೇಡ, ಅದೇನೆ ಇರಲಿ ಈ ವರ್ಷದಲ್ಲಿ ಇನ್ನು ಎರಡು ತಿಂಗಳು ಬಾಕಿ ಇದೆ, ಆಗಿರುವ ನಿರಾಶೆಯನ್ನು ಅಳಿಸುವ ಒಂದಾದರು ಚಿತ್ರ ಮೂಡಿಬರಲಿ ಎಂದಷ್ಟೇ ಹಾರೈಸುವೆ.