ಸುಮಾರು 2013-14 ಇಸ್ವಿಯಲ್ಲಿ ಆದ ಒಂದು ಅನುಭವ.
ಜೆಪಿ ನಗರದ ಕಡೆ ಹೊರಟಿದ್ದೆ ಮತ್ತು ಆ ದಿನಗಳಲ್ಲಿ ಸಾಧ್ಯವಾದಾಗಲೆಲ್ಲ ಸಾರ್ವಜನಿಕ ಸಾರಿಗೆ ಬಳಸುವ ಹುನ್ನಾರವಿತ್ತು ನನಗೆ.
ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾದು ಕುಳಿತೆ.
ಸಾಮಾನ್ಯವಾಗಿ ಘಳಿಗೆಗೊಂದು ಬಸ್ಸು ಬರೋದು, ಅಂದು ಇಪ್ಪತ್ತು ನಿಮಿಷ ಕಾದರೂ ಬರಲಿಲ್ಲ.
ನಗರ ಸಾರಿಗೆಯನ್ನು, ಬೆಂಗಳೂರಿನ ಹಾಳು ಟ್ರಾಫಿಕ್ ಅನ್ನು ಶಪಿಸುತ್ತಾ, ಕುಳಿತಿದ್ದಾಗ ಒಂದು ಬಸ್ಸು ಬಂದು ನಿಂತಿತು ( ಆದರೆ ಜೆಪಿ ನಗರದ ಕಡೆ ಹೋಗುವ ಬಸ್ಸಲ್ಲ)
ಒಬ್ಬ ದೃಷ್ಟಿಹೀನ ಯುವಕ ಇಳಿದು ಕೋಲನ್ನು ಕುಟ್ಟುತ್ತಾ, ಬಸ್ಸು ನಿಲ್ದಾಣದ ಕಡೆ ಕೈಯ ಬೀಸುತ್ತಾ ಹೆಜ್ಜೆ ಇಡತೊಡಗಿದನು.
ನನ್ನ ಪಕ್ಕದಲ್ಲಿ ಕುಳಿತಿದ್ದ ವಯೋವೃದ್ಧರೊಬ್ಬರು, ಅವನ ಬಳಿ ಹೋಗಿ ಅವನ ಕೈ ಹಿಡಿದು ಬಸ್ಸು ನಿಲ್ದಾಣದಲ್ಲಿ ತಂದು ಕೂರಿಸಿದರು.
ಇಬ್ಬರೂ ಮಾತಿಗೆ ಕೂತರು, ಆತ ಟಿನ್ ಫ್ಯಾಕ್ಟರಿ ಬಳಿ ಹೊರಟಿರುವುದಾಗಿ ತಿಳಿದುಬಂತು ಮತ್ತು ದಿನವಿಡೀ ಸಾರಿಗೆ ಬಸ್ಸಿನಲ್ಲೇ ಓಡಾಡುವ ಆತನಿಗೆ ನಾಗರೀಕರೇ ಮಾರ್ಗದರ್ಶಕರಾಗಿ ಸಹಾಯ ಮಾಡುವುದರ ಬಗ್ಗೆ ಹೇಳತೊಡಗಿದನು.
ನನಗೆ ಇದನ್ನು ಕೇಳಿ ಖುಷಿ ಒಂದು ಕಡೆಯಾದರೆ, ನನ್ನ ಬಸ್ಸು ಬಾರದಿರುವುದಕ್ಕೆ ಬೇಸರ ಮತ್ತೊಂದು ಕಡೆ.
ಇವರಿಬ್ಬರ ಸಂಭಾಷಣೆ ಮಧ್ಯದಲ್ಲಿ ನನ್ನ ಮೂಗು ತೂರಿಸುತ್ತ, ಆ ವಯೋವೃದ್ಧರನ್ನು ಒಮ್ಮೆ ಕೇಳಿದೆ
"ಸಾರ್ ಎರಡು ನಿಮಿಷಕ್ಕೊಂದು ಬಸ್ಸು ಬರೋದು ಕೊತ್ತನೂರು ದಿಣ್ಣೆ ಕಡೆಗೆ, ಇವತ್ತು ಯಾಕೋ ಅರ್ಧ ಘಂಟೆಯಾದರೂ ಒಂದೂ ಬಂದಿಲ್ಲ"
ಈ ಮಾತು ಕೇಳುತ್ತಲೇ ಆ ದೃಷ್ಟಿ ಹೀನ ಯುವಕ ನನ್ನ ಬಳಿ ನೋಡುತ್ತಾ
"ಅಯ್ಯೋ ಇಲ್ಲಿಗೆ ಯಾಕೆ ಬಂದು ಕಾಯ್ತಾ ಇದ್ದೀರಾ? ನೀವು ಆ ಕಡೆ ಹೋಗಬೇಕು" ಎಂದು ನಿಲ್ದಾಣದ ಸರಿಯಾದ ದಿಕ್ಕನ್ನು ನನಗೆ ತೋರಿಸಿದ.
"ಪಾಪ, ತುಂಬಾ ಕಾದುಬಿಟ್ರಿ ಅಂತ ಕಾಣುತ್ತೆ" ಎಂದು ಕನಿಕರ ಕೂಡ ವ್ಯಕ್ತಪಡಿಸಿದ.
ನನ್ನ ಪೆದ್ದು ತನವನ್ನು ಖಂಡಿಸುತ್ತಾ ಆತನಿಗೆ ವಂದನೆಯನ್ನು ಹೇಳುತ್ತಾ ಸರಿಯಾದ ನಿಲ್ದಾಣದ ಕಡೆ ಹೊರಟೆ
ಕಣ್ಣು ಕಾಣದ ಆತ ನನಗೆ ಮಾರ್ಗದರ್ಶಿಯಾದ
ಕಣ್ಣಿದ್ದೂ ನಾ ಕುರುಡನಾದೆ