"ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ.........." FM ನಲ್ಲಿ ತೇಲಿ ಬಂದ ಈ ಹಾಡು ನನ್ನ ಮನಸ್ಸಿನ ಯೋಚನಾಲಹರಿಯನ್ನು ಸ್ವಲ್ಪ ಗರಿಗೆದರಿದಂತೆ ಮಾಡಿತು. ಇಂದಿನ ದಿನಗಳಲ್ಲಿ ನಶಿಸಿಹೋಗುತ್ತಿರುವ ಆ ಹಕ್ಕಿಯನ್ನು ನೆನೆದು ಬರೆದ ಈ ಅಪರೂಪದ ಹಾಗು ಎಕೈಕ ಹಾಡು ಆ ಹಕ್ಕಿಗೆ ಅರ್ಪಿಸಿದಂತಿತ್ತು.
ಗುಬ್ಬಚ್ಚಿಯೇ ಇಲ್ಲದ ಇಂದಿನ ದಿನಗಳಲ್ಲಿ ಗುಬ್ಬಚ್ಚಿಯ ಗೂಡಿನಲ್ಲಿ ಕದ್ದುಮುಚ್ಚಿ ಪ್ರೇಮಿಗಳ ಕೈಲಿ ಕುಚ್ಚಿಕುಚ್ಚಿ ಆಡಿಸುವ ಆ ಸಾಹಿತ್ಯಕಾರನ ಕಲ್ಪನೆಗೆ ನಿಜಕ್ಕು ತಲೆಬಾಗಬೇಕು.
ನಾನು ಮಗುವಾಗಿದ್ದಾಗ ಊಟ ಮಾಡಲು ಹಠ ಮಾಡಿದರೆ ಕಾಗೆ-ಗುಬ್ಬಿ ತೋರಿಸಿ ಊಟ ಮಾಡಿಸುತ್ತಿದ್ದರಂತೆ. ಕಾಗೆ-ಗುಬ್ಬಿ ತೋರಿಸಿದರೆ ಕ್ಷಣ ಮಾತ್ರದಲ್ಲಿ ಮಗುವಿನ ಹಟ ಬಂದ್, ಮಹಡಿಯ ಮೇಲೆ ಬಿಸಿಲಿಗೆ ಹಾಕಿದ ಅರಳು ಸಂಡಿಗೆ, ಗೋದಿ, ಅಕ್ಕಿ ಮುಂತಾದವುಗಳನ್ನು ಕದ್ದು-ಮುಚ್ಚಿ ಹೆಕ್ಕಿ ತಿನ್ನುತ್ತಿದ್ದ ಅವುಗಳ ಸಮೂಹವು ಒಮ್ಮೆ "ಉಶ್ಷ್.." ಎಂದು ಕೈ ಬೀಸಿದಾಗ ಪುರ್ರ್ರನೆ ಹಾರಿಹೋಗುವ ಅವುಗಳ ಪರಿ ನಿಜಕ್ಕೊ ಮನಸ್ಸಿಗೆ ಮುದ ನೀಡುತ್ತಿದ್ದವು. ಹೀಗೆ ಬಾಲ್ಯದಲ್ಲಿ ನಮ್ಮನ್ನು ಕಾಡಿದ, ಮನರಂಜಿಸಿದ ಗುಬ್ಬಕ್ಕ ಇಂದು ನಶಿಸಿ ಹೋಗುತ್ತಿರುವ ಪ್ರಾಣಿ-ಪಕ್ಷಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವುದು ವಿಪರ್ಯಾಸ. ಇಂದು ಬೆಂಗಳೊರಿನ ಆಸುಪಾಸಿನಲೆಲ್ಲೂ ಗುಬ್ಬಿಯ ಸುಳಿವು ಇಲ್ಲ. ಜಾಗತೀಕರಣ, ಅತಿಯಾದ ನಾಗರೀಕರಣದಿಂದಾಗಿ ಹಸಿರಿನ ಬುಡಕ್ಕೆ ಕೂಡ್ಲಿ ಇಟ್ಟಿರುವುದೇ ಇದಕ್ಕೆ ಕಾರಣ ಎಂಬುದು ವಾಸ್ತವಿಕ ಸಂಗತಿಯಾದರೆ, ಮೊಬೈಲ್ ಫೋನುಗಳ tower ಗಳಿಂದ ಉಂಟಾಗುವ ತರಂಗಗಳ ಕಂಪನವು ಗುಬ್ಬಿಯ ಜನನ ಶಕ್ತಿಯನ್ನು ಕಡಿಮೆ ಮಾಡಿರುವುದೇ ಇದಕ್ಕೆ ಕಾರಣ ಎಂದು ಇನ್ನೊಂದು ಸಮೂಹದ ವಾದವಾಗಿದೆ. ಇತ್ತೀಚೆಗಷ್ಟೇ ಊಟಿಯ ಪ್ರಕೃತಿಯ ರಮ್ಯತಾಣದಲ್ಲಿ ಮೊಬೈಲ್ ಫೋನ್ Tower ಗಳ ನಡುವೆಯು ಗುಬ್ಬಿಗಳ ಚಿಲಿ-ಪಿಲಿಯನ್ನು ಕೇಳ ಆನಂದಿಸಿದ ನನಗೆ ಈ Tower ಬಗೆಗಿನ ವಾದವನ್ನು ಸಂಪೂರ್ಣವಾಗಿ ನಂಬುವುದು ಸ್ವಲ್ಪ ಕಷ್ಟವೇ.
ಕಾರಣ ಎನೇ ಇರಲಿ, ಗುಬ್ಬಿಗಳ ಚಿಲಿ-ಪಿಲಿಗಳ ಕಲರವ ಇಂದು ನೆನಪು ಮಾತ್ರ. ಮತ್ತು ಆ ನೆನಪು ಕೆಲವೊಮ್ಮೆ ಬಹಳ ಕಾಡಿಸುವುದುಂಟು, ಬಹುಶಃ ಬೆಂಗಳೂರಿಗರು ಗುಬ್ಬಿಯನ್ನು ನೋಡಲೇಬೇಕೆಂದು ಹಟಕ್ಕೆ ಬಿದ್ದರೆ ಅವುಗಳು ಕಾಣಸಿಗುವ ಹತ್ತಿರದ ತಾಣಗಳು ಎಂದರೆ ಬನ್ನೇರುಘಟ್ಟ, ವಿಮಾನ ನಿಲ್ದಾಣ, ನಂದಿ ಬೆಟ್ಟ ಮಾತ್ರ ಎನಿಸುತ್ತದೆ.