Friday 15 January 2010

ನೂರೊಂದು ನೆನಪು

ಬಹಳ ದಿನಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಕಾಡುತ್ತಿದ್ದ ಸೋಲಿನ ಬಾಧೆಯ ಬಗ್ಗೆ ಬರೆದಿದ್ದೆ. ವರ್ಷ ಅಂತ್ಯ ಗೊಂಡಂತೆ ಆ ಸೋಲಿನ ಬಾಧೆಯು ನಶಿಸಿ ಹೋಗುತ್ತದೆ ಎಂಬ ನನ್ನ ಎಣಿಕೆ ಸುಳ್ಳಾದದ್ದು ಡಿಸಂಬರ್ 30 ರಂದು.
ಕನ್ನಡ ಚಿತ್ರರಂಗಕ್ಕೆ ಒಂದು ಶಕ್ತಿಯಂತೆ ಇದ್ದ ಮೇರು ನಟ ಡಾವಿಷ್ಣುವರ್ಧನ್ ಅವರು ವರ್ಷಾಂತ್ಯ ಗೊಳ್ಳುವ ಮೊದಲೇ ತಮ್ಮ ಜೀವನದ ಅಂತ್ಯವನ್ನು ಕಂಡರು.
ವಿಷ್ಣು ಅವರ ಸಾವು ತೀರಾ ಅನಿರೀಕ್ಷಿತ, ಅದಕ್ಕೆ ಇರಬೇಕು ಅದನ್ನು ನಂಬಲು ಇನ್ನೂ ಅಸಾಧ್ಯ.

ಕ್ಷಮಿಸಿ,ನೊಂದು ಮರೆತುಹೋದ ವಿಷಯವನ್ನು ಮತ್ತೆ ಪ್ರಸ್ತಾಪಿಸಿ ನಿಮಗೆ ಬೇಜಾರು ಮಾಡ್ತಾಯಿದೀನಿ.
ನಾನು ಕೂಡ ಇದೇ ಕಾರಣದಿಂದ ಈ ವಿಷ್ಯದ ಪ್ರಸ್ತಾಪ ಮಾಡಿರಲಿಲ್ಲ, ಆದರೆ ಪದೇ ಪದೆ ವಿಷ್ಣು ಅವರ ಚಿತ್ರದ ತುಣುಕುಗಳನ್ನು ತೋರಿಸಿ ಮತ್ತೆ ಮತ್ತೆ ಅವರ ನೆನಪು ಕಾಡುವಂತೆ ಮಾಡುವ ಯಶಸ್ಸು ಮಾಧ್ಯಮಗಳಿಗೆ ಸಲ್ಲುತ್ತವೆ. ಅಂಥ ಮೇರು ನಟನ ನೆನಪಿಗೆ ಈ ಬ್ಲಾಗ್ ಅರ್ಪಣೆ.
ನಾಗರಹಾವು,ಸುಪ್ರಭಾತ, ರಾಯರು ಬಂದರು ಮಾವನ ಮನೆಗೆ, ಬಂಧನ, ಮುತ್ತಿನಹಾರ ಹೀಗೆ ಸಾಲಾಗಿ ತಮ್ಮ ಅಭಿನಯ ಕೌಶಲ್ಯವನ್ನು ತೋರಿಸಿದ ವಿಷ್ಣು ಅವರ ಚಿತ್ರಗಳ ಹೆಸರನ್ನು ಪಟ್ಟಿ ಮಾಡುತ್ತ ಹೋದರೆ ಈ ಬ್ಲಾಗ್ ಬಹಳ ದೊಡ್ಡದಾಗುತ್ತದೆ.
ಡಿ 30ರಂದು ಕರ್ನಾಟಕದಲ್ಲಿ ಹೆಚ್ಚು ಚರ್ಚೆಯಾದ ವಿಷಯವೆಂದರೆ ವಿಷ್ಣುವರ್ಧನ್!! ಹೆಸರಾಂತ Internet search Engine ಆದ Google ನಲ್ಲಿ ಅಂದು ಹುಡುಕಲ್ಪಟ್ಟ ಅಂಶಗಳಲ್ಲಿ ಶೇ 65 ರಷ್ಟು ವಿಷ್ಣು ಅವರಿಗೆ ಸಂಭಂದ ಪಟ್ಟ ವಿಷಯಗಳು ಮತ್ತು ಇದೊಂದು ದಾಖಲೆ ಎಂದು ಸ್ವತಃ Google ಸಂಸ್ಥೆಯೆ ಹೇಳಿಕೆ ಕೊಟ್ಟಿತು. ಇಂಥ ಖ್ಯಾತಿಯುಳ್ಳ ಮಹಾನ್ ನಟನನ್ನು ಪಡೆದಕ್ಕಾಗಿ ಹೆಮ್ಮೆ ಪಡಬೇಕೊ ಅಥವ ಕಳೆದುಕೊಂಡಿದ್ದಕ್ಕೆ ದುಃಖಿಸಬೇಕೊ ತಿಳಿಯದು.
ಇಷ್ಟಲ್ಲ ಖ್ಯಾತಿಗಳಿಸಿದ್ದರೂ ವಿಷ್ಣುಗೆ ಇತ್ತೀಚಿನ ದಿನಗಳಲ್ಲಿ ಏನೋ ಅಸಮಾಧಾನ ಬಾಧಿಸುತಿತ್ತು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಅಭಿಪ್ರಾಯ ಪಡುತ್ತಾರೆ.
ವಿಷ್ಣುಗೆ ಆಸಕ್ತಿ ಕಡಿಮೆ ಆಗಿತ್ತೋ ಅಥವ ಅಭಿಮಾನಿಗಳ ಒತ್ತಾಯವೋ ಒಳ್ಳೆಯ ಅಭಿರುಚಿಯಿರುವ ಚಿತ್ರಗಲಲ್ಲಿ ವಿಷ್ಣು ಕಾಣಿಸಿಕೊಂಡಿದ್ದು ಬಹಳ ಕಡಿಮೆ. ಅವರ
ಪ್ರತಿಭೆಯನ್ನು ನಮ್ಮ ಚಿತ್ರರಂಗವು ಸರಿಯಾಗಿ ಬಳಸಿಕೊಳ್ಳಲಿಲ್ಲ ಎನ್ನುವುದು ನನ್ನ ವಾದ.
ಆ ಕಾರಣದಿಂದಲೆ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲೂ "ಬಳ್ಳಾರಿ ನಾಗ"ದಂತ ಚಿತ್ರದಲ್ಲಿ ನಟಿಸುವಂತ ದೌರ್ಭಾಗ್ಯವನ್ನು ಕಾಣಬೇಕಾಯ್ತು.
ಇಂತ ಮಹಾನ್ ನಟನ ಕೈ ಹಿಡಿದ ಭಾರತಿ ಅವರ ಪರಿಸ್ಥಿತಿಯನ್ನು ಅಂದು ನೋಡಿ ನಿಜಕ್ಕೂ ಬಹಳ ಹಿಂಸೆಯಾಯ್ತು. ಗಂಡನ ಕಳೆದುಕೊಂಡ ನೋವಿನ ಭಾರದ ಜೊತೆ ರೊಚ್ಚಗೆದ್ದ ಅಭಿಮಾನಿ ರೂಪದ ಕಿಡಿಗೇಡಿಗಳ ಸಮೂಹವನ್ನುದ್ದೇಶಿಸಿ "ದಯವಿಟ್ಟು ಯಾರು ಗಲಾಟೆ ಮಾಡಬೇಡಿ" ಎಂದು ಕೈ ಮುಗಿದು ಶಾಂತಿಗೊಳಿಸುವ ಜವಾಬ್ದಾರಿಯನ್ನೂ ಹೊರಬೇಕಾಯ್ತು. ಇಷ್ಟೆಲ್ಲರ ನಡುವೆಯೂ ’ಜೈ’ ಕಾರ ಹಾಕುವಂತ ಅವಿವೇಕದ ಕೆಲಸವನ್ನು ಮಾಡಿದ ತಿಳಿಗೇಡಿಗಳನ್ನು ಅಭಿಮಾನಿಗಳೆಂದು ಪರಿಗಣಿಸಲು ಸ್ವಲ್ಪ ಕಷ್ಟವೇ.
ವಿಷ್ಣು ಅವರ ಸಾವು ನಾಡಿಗೆ ಭರಿಸಲಾಗದ ನಷ್ಟ, ಆದರೆ ಅದಕ್ಕಿಂತಲೂ ಹೆಚ್ಚಿನ ನಷ್ಟವನ್ನು ರೊಚ್ಚಗೆದ್ದ ಅಭಿಮಾನಿ ಸಮೂಹವು ಮಾಡಿತೆನ್ನುವುದು ನಾಚಿಕೆಗೇಡಿನ ವಿಷಯ.
ಇಷ್ಟೆಲ್ಲವನ್ನು ನೇರ ಪ್ರಸಾರದಲ್ಲಿ ತೋರಿಸುತ್ತಿದ್ದ ವಾಹಿನಿಗಳು ಜೊತೆಯಲಿ ವಿಷ್ಣು ಅವರ "ದಿಗ್ಗಜರು" ಚಿತ್ರದ ತುಣುಕನ್ನು ತೋರಿಸಿತು, ವಿಷ್ಣು ಅವರನ್ನು ಯಮದೂತರು ಕರೆದೊಯ್ಯುತ್ತಿರುತ್ತಾರೆ ಆಗ ವಿಷ್ಣು "ಬರುವಾಗ ನಾನು ಏನು ಹೊತ್ಗೊಂಡು ಬರಲಿಲ್ಲ, ಆದರೆ ಹೋಗುವಾಗ ನಿಮ್ಮ ಪ್ರೀತಿ, ಅಭಿಮಾನ ಹೊತ್ಗೊಂಡು ಹೋಗ್ತಾಯಿದೀನಿ...........ನಾ ಮತ್ತೆ ಹುಟ್ಟಿ ಬರ್ತೀನಿ" ಎಂಬ ಮಾತನ್ನು ಹೇಳುವ ಸನ್ನಿವೇಶವನ್ನು ಮತ್ತೆ ಮತ್ತೆ ತೋರಿಸಿದಾಗ..ನಿಜಕ್ಕೂ ವಿಷ್ಣು ಈ ಮಾತನ್ನು ಅಂದು ವಾಸ್ತವದಲ್ಲೂ ಆಡಿದಂತೆ ಭಾಸವಾಗುತ್ತಿತ್ತು.

ಆ ಮಾತು ನಿಜವಾಗುತ್ತ?
ಆಗಲಿ ಅಂತ ನಾನು ಆಶಿಸುತ್ತೇನೆ. ನೀವು??